
ಮೈಸೂರು
ಮೋದಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ: ಯೂತ್ ಕಾಂಗ್ರೆಸ್
ಯಾವುದೇ ಮುನ್ಸೂಚನೆ ನೀಡದೆ 500 ಮತ್ತು 1000 ರು. ನೋಟುಗಳನ್ನು ರದ್ದು ಮಾಡಿರುವ ಕೇಂದ್ರ ಸರಕಾರ ತುಘಲಕ್ ಮಾದರಿಯ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿ ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್ ಪರಿಷತ್ ವತಿಯಿಂದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರಧಾನಿ ಮೋದಿ ತಮಗೆ ಬೇಕಾದವರಿಗೆ ಮಾಹಿತಿ ನೀಡಿ ನೋಟು ರದ್ದು ಮಾಡಿದ್ದಾರೆ. ಈ ಬಗ್ಗೆ ಕಳೆದ ವಾರ ಮಾಜಿ ಸಚಿವ ಎಸ್.ಎ. ರಾಮದಾಸ್ ಹೇಳಿಕೆ ನೀಡಿರುವುದೇ ಸಾಕ್ಷಿ. ಮೈಸೂರಿನಲ್ಲಿ ಹೊಸ 2 ಸಾವಿರ ರು. ನೋಟು ಮುದ್ರಣವಾಗುತ್ತಿರುವ ವಿಷಯ ನನಗೆ ಮೊದಲೇ ತಿಳಿದಿತ್ತೆಂದು ರಾಮದಾಸ್ ಹೇಳಿದ್ದರು. ರಾಮದಾಸ್ ಅವರನ್ನು ಬಂಧಿಸಬೇಕು. ಸಿಬಿಐಯಿಂದ ವಿಚಾರಣೆ ನಡೆಸಬೇಕೆಂದು ಒತ್ತಾಯಿಸಿದರು.
ಕೇಂದ್ರ ಸರಕಾರ ಜನರಿಗೆ ಮೋಸ ಮಾಡಿದೆ. ಮೋದಿ ಅವರು ತುಘಲಕ್ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಕೇಂದ್ರ ಸರಕಾರ, ಪ್ರಧಾನಿ ಮತ್ತು ರಾಮದಾಸ್ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ವಿಜಯ್ ಕುಮಾರ್, ನಾಗೇಶ್, ರವಿ, ರಘು, ಅಜಯ್ ಹಾಗೂ ಇತರರು ಉಪಸ್ಥಿತರಿದ್ದರು.