
ದೇಶ
ಜನ್ಧನ್ ಖಾತೆಗಳಿಗೆ 21 ಸಾವಿರ ಕೋಟಿ ರೂಪಾಯಿ ಸಂದಾಯ
ದೇಶದ ಪ್ರತಿಯೊಬ್ಬರು ಬ್ಯಾಂಕ್ ಅಕೌಂಟ್ ಹೊಂದಿ, ಬಡತನ ನಿರ್ಮೂಲನೆ ಹಾಗೂ ಆರ್ಥಿಕ ಅಸ್ಪೃಶ್ಯತೆ ದೂರವಾಗಿಸುವ ಸದುದ್ದೇಶದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮಹಾತ್ವಕಾಂಕ್ಷೆ ಯೋಜನೆಯಾದ “ಜನ್ಧನ್” ಇಂದು ಕಾಳಧನಿಕರ ಅಕ್ಷಯ ಪಾತ್ರೆಯಾಗಿ ಪರಿಣಮಿಸಿದೆ.
ದೇಶದಲ್ಲಿ ಕಳೆದ ವರ್ಷ ಜಾರಿಗೆ ತಂದ ಜನ್ಧನ್ ಯೋಜನೆಯಿಂದ ಶೇ.68ರಷ್ಟು ಜನರು ಸದುಪಯೋಗಪಡಿಸಿಕೊಂಡು ಬ್ಯಾಂಕ್ಗಳಲ್ಲಿ ಅಕೌಂಟ್ ತೆರೆದರು. ಇಂದು ಇದೇ ಅಕೌಂಟ್ಗಳಲ್ಲಿ ಕಾಳಧನವನ್ನು ತುಂಬಿದ್ದು ಸುಮಾರು 21 ಸಾವಿರ ಕೋಟಿ ರೂಪಾಯಿಗಳು ಖಾತೆಗಳಿಗೆ ಜಮವಾಗಿದೆ.
ದೇಶದಲ್ಲಿ ನ.8ರಂದು 500 ಹಾಗೂ 1000 ನೋಟುಗಳ ಅಮಾನ್ಯ ಹಿನ್ನೆಲೆಯಲ್ಲಿ ಕಪ್ಪು ಹಣವನ್ನು ಸಕ್ರಮಗೊಳಿಸಿಕೊಳ್ಳಲು ಜನ್ಧನ್ ಖಾತೆಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ವರ್ಷದಿಂದ 24 ಕೋಟಿ ಮಂದಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದ್ದು ಕಳೆದೊಂದು ವಾರದಿಂದ ಜನ್ಧನ್ ಖಾತೆಯಲ್ಲಿ ಏಕಾಏಕಿ ಬೃಹತ್ ಪ್ರಮಾಣದ ಹಣ ಸಂಗ್ರಹವಾಗಿದ್ದು ಈ ವಹಿವಾಟಿನಿಂದ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಇದುವರೆಗೆ ಜನ್ಧನ್ ಖಾತೆಗಳಲ್ಲಿ 21,000 ಕೋಟಿ ರೂಪಾಯಿ ಜಮಾ ಅಗಿದ್ದು ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಮೊತ್ತದ ಹಣ ಜಮಾವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.