
ಮೈಸೂರು
ಮೌಲ್ಯವನ್ನು ನೀಡುವ ಶಿಕ್ಷಣವನ್ನು ಪಡೆಯಿರಿ : ನಿರ್ಮಲಾನಂದ ಸ್ವಾಮೀಜಿ
ಆಧುನಿಕ ಜ್ಞಾನಕ್ಕೆ ದಾಸರಾಗದೇ ಮೌಲ್ಯವನ್ನು ನೀಡುವ ಶಿಕ್ಷಣವನ್ನು ಹೊಂದಬೇಕು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಮೈಸೂರಿನ ಪುರಭವನದಲ್ಲಿ ರಾಮಕೃಷ್ಣ ಸೇವಾ ಸಂಘವು ಏರ್ಪಡಿಸಿದ್ದ ವಿವೇಕ ಸ್ಪಂದನ ಅಭಿಯಾನ ಹಾಗೂ ರಾಮಕೃಷ್ಣಮಠದ ಧರ್ಮದರ್ಶಿ ಸ್ವಾಮಿ ಆತ್ಮಜ್ಞಾನಾನಂದ ಅವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದ ಸಾನಿಧ್ಯವಹಿಸಿ ನಿರ್ಮಲಾನಂದ ಸ್ವಾಮೀಜಿ ಮಾತನಾಡಿದರು.
ಜ್ಞಾನವು ವ್ಯಕ್ತಿಯ ಗೌರವವನ್ನು ಹೆಚ್ಚಿಸಬೇಕೇ ಹೊರತು ವ್ಯಕ್ತಿತ್ವಕ್ಕೆ ಮಸಿ ಬಳಿಯಬಾರದು. ಆಧುನಿಕ ಜ್ಞಾನಕ್ಕೆ ದಾಸರಾಗದೇ ಮೌಲ್ಯವನ್ನು ನೀಡುವ ಶಿಕ್ಷಣವನ್ನು ಹೊಂದಬೇಕು ಎಂದು ತಿಳಿಸಿದರು. ಸ್ವಾಮಿ ವಿವೇಕಾನಂದರು ಜ್ಞಾನ-ವಿಜ್ಞಾನವನ್ನು ಏಕೀಕರಿಸಿ ಜಗತ್ತಿಗೆ ಶ್ರೇಷ್ಠತೆಯ ಪಾಠವನ್ನು ಬೋಧಿಸಿದರು. ಆಧ್ಯಾತ್ಮದ ಮೂಲಕ ವಿಜ್ಞಾನವನ್ನು ಅಷ್ಟೇ ಪರಿಣಾಮಕಾರಿಯಾಗಿ ವಿವರಿಸಿದ್ದರು. ವಿಜ್ಞಾನ ಕೇವಲ ಗಣಿತಶಾಸ್ತ್ರವಾಗಿರಬಾರದು. ಮಾನವ ಪರವಾದ ಕಾಳಜಿಯನ್ನೂ ಹೊಂದಿರಬೇಕು. ಮಾನವೀಯತೆಯ ನೆಲೆಯ ಮೇಲೆ ವಿಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕಾಂಗ್ರೆಸ್ ಮುಖಂಡ ಡಿ.ಮಾದೇಗೌಡ ಮತ್ತಿತರರು ಉಪಸ್ಥಿತರಿದ್ದರು.