
ಮೈಸೂರು
ಕನ್ನಡ ರಾಜ್ಯೋತ್ಸವದಂಗವಾಗಿ ರೋಗಿಗಳಿಗೆ ಹಣ್ಣು – ಬ್ರೆಡ್ ವಿತರಣೆ
ಕನ್ನಡ ರಾಜ್ಯೋತ್ಸವದಂಗವಾಗಿ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಮಂಗಳವಾರ (ನ.29) ನಗರದ ಜೆ.ಎಸ್.ಎಸ್. ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಾಗೂ ಬ್ರೆಡ್ ವಿತರಿಸಲಾಯಿತು.
ಕಳೆದ ಹಲವಾರು ವರ್ಷಗಳಿಂದ ಕನ್ನಡ ಹೋರಾಟಗಾರ ಹಾಗೂ ಸಮಿತಿಯ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ ನೇತೃತ್ವದಲ್ಲಿ ನವೆಂಬರ್ ಮಾಸದಲ್ಲಿ ಜೆ.ಎಸ್.ಎಸ್, ಕೃಷ್ಣರಾಜ ಮತ್ತು ಆಯುರ್ವೇದ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ಹಾಗೂ ಬ್ರೆಡ್ ವಿತರಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿಯೂ ದಾನಿಗಳ ಸಹಾಯದಿಂದ ಸಮಿತಿಯು ಈ ಕಾರ್ಯ ಕೈಗೊಂಡಿದೆ ಎಂದು ಸುದ್ದಿಗಾರರಿಗೆ ತಿಳಿಸಿ ರೋಗಿಗಳಿಗೆ ಶೀಘ್ರ ಗುಣಮುಖರಾಗಲು ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಪಾದಕ ರಾಜಶೇಖರ್ ಕೋಟಿಯವರು ಕನ್ನಡವನ್ನು ಕಚೇರಿಗಳಲ್ಲಷ್ಟೇ ಅಲ್ಲದೇ ಸಾರ್ವಜನಿಕವಾಗಿಯೂ ಕಡ್ಡಾಯಗೊಳಿಸಬೇಕು. ನೆಲ, ಜಲದ ವಿಷಯಗಳಲ್ಲಿ ಏಕತೆಯನ್ನು ಕಾಪಾಡಿ, ಶಿಕ್ಷಣದಲ್ಲಿ ಕನ್ನಡ ಕಡ್ಡಾಯವಾಗಲಿ. ಮನೆಯಲ್ಲಿಯೂ ಕನ್ನಡವನ್ನೇ ಬಳಸುವಂತಹ ಅಗತ್ಯವಿದೆ. ಮೂಗೂರು ನಂಜುಂಡಸ್ವಾಮಿಯವರು ಸಂಕಷ್ಟದಲ್ಲಿರುವ ಕನ್ನಡಿಗರಿಗೆ ನೆರವಾಗುತ್ತಿದ್ದಾರೆ. ಪ್ರತಿವರ್ಷವೂ ರೋಗಿಗಳಿಗೆ ಧೈರ್ಯ ತುಂಬಿ ಸಾಂತ್ವನ ಹೇಳುವಂತ ಕಾರ್ಯ ಶ್ಲಾಘನೀಯವೆಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಪುಷ್ಪಾ ಅಮರನಾಥ್, ರಾಜ್ಯ ವಿಪ್ರ ಸಮಾಜದ ಹಿರಿಯ ಮುಖಂಡ ಕೆ.ಎಸ್.ರಘುರಾಮಯ್ಯ ವಾಜಪೇಯಿ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ಸಿ. ಬಲರಾಮ್, ಜೆ.ಎಸ್.ಎಸ್. ಆಸ್ಪತ್ರೆಯ ಅಧೀಕ್ಷಕ ಡಾ|| ಗುರುಸ್ವಾಮಿ, ರಾಜಶೇಖರ ಕದಂಬ ಹಾಗೂ ಕನ್ನಡ ಚಳುವಳಿಗಾರರು ಉಪಸ್ಥಿತರಿದ್ದರು.