
ಮೈಸೂರು
ವಿದ್ಯಾಭ್ಯಾಸದ ಜೊತೆ ಆರೋಗ್ಯದ ಕಡೆ ಗಮನಹರಿಸಿ : ಡಾ.ಸಿ.ಸುವರ್ಣ ಸಲಹೆ
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಆರೋಗ್ಯದ ಕಡೆಗೆ ಗಮನಹರಿಸಿ ಎಂದು ಜಿಲ್ಲಾ ಕ್ಷಯ ರೋಗ ನಿಯಂತ್ರಣ ಘಟಕ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸಿ.ಸುವರ್ಣ ಸಲಹೆ ನೀಡಿದರು.
ಮೈಸೂರಿನ ಶ್ರೀ ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಮತ್ತು ಸ್ಕೂಲ್ ಆಫ್ ನರ್ಸಿಂಗ್, ಶ್ರೀ ನಟರಾಜ ಜನರಲ್ ಆಸ್ಪತ್ರೆ ಜಿಲ್ಲಾ ಏಡ್ಸ್ ನಿರೋಧಕ ಹಾಗೂ ನಿಯಂತ್ರಣ ಘಟಕ ವತಿಯಿಂದ ವಿಶ್ವ ಏಡ್ಸ್ ದಿನಾಚರಣೆ ಮತ್ತು ಸಂವಾದ ಹಾಗೂ ಜಾಥಾ ಕಾರ್ಯಕ್ರಮವನ್ನು ಸಿ.ಸುವರ್ಣ ಉದ್ಘಾಟನೆ ಮಾಡಿದರು.
ಬಳಿಕ ಮಾತನಾಡಿದ ಅವರು ಯುವಜನತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ವಿಶ್ವಾದ್ಯಂತ ನಡೆಯಬೇಕು ಆಗ ಮಾತ್ರ ಜನರಲ್ಲಿ ಅರಿವು ಮೂಡಲು ಸಾಧ್ಯ ಎಂದರು. ಹೆಚ್.ಐ.ವಿ ಹರಡಲು ಅಸುರಕ್ಷಿತ ಲೈಂಗಿಕ ಸಂಪರ್ಕವೇ ಕಾರಣವಾಗಿದೆ. ಏಡ್ಸ್ ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು, ಒಮ್ಮೆ ಬಂದರೆ ರೋಗದಿಂದ ಮುಕ್ತಿ ಇಲ್ಲ. ಸಾರ್ವಜನಿಕರು ಈ ಕುರಿತು ಎಚ್ಚರ ವಹಿಸುವುದು ಅಗತ್ಯ ಎಂದು ತಿಳಿಸಿದರು.
ಏಡ್ಸ್ ರೋಗಕ್ಕೆ ತುರ್ತು ಚಿಕಿತ್ಸೆಯ ಅಗತ್ಯವಿಲ್ಲ, ಜನರಲ್ಲಿ ಅರಿವು ಮುಖ್ಯವಾಗುತ್ತದೆ. 1982 ರಿಂದ ಏಡ್ಸ್ ರೋಗ ನಿವಾರಣೆಗಾಗಿ ಔಷಧಿಗಳನ್ನು ಕಂಡುಹಿಡಿಯಲು ಸಂಶೋಧನೆಗಳು ನಡೆಯುತ್ತಿದೆ. ಆದರೆ ಹೆಚ್ಚು ಫಲಕಾರಿಯಾಗದೆ ಸೋತಿವೆ. ಹೆಚ್ಐವಿ ರೋಗಕ್ಕೆ ಅರಿವೇ ಮದ್ದು. ಬೇರೆ ಯಾವ ಔಷಧಿಯೂ ಇಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೈಸೂರು ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಪ್ರವೀಣ್ ಕುಮಾರ್, ನಟರಾಜ ಸ್ಕೂಲ್ ಆಫ್ ನರ್ಸಿಂಗ್ ಪ್ರಾಂಶುಪಾಪೆ ಲೀಲಮ್ಮ, ನಟರಾಜ ಕಾಲೇಜಿನ ಶೈಕ್ಷಣಿಕ ಸಂಯೋಜಕ ಪ್ರೊ.ಸತ್ಯನಾರಾಯಣ ಮತ್ತಿತರರು ಉಪಸ್ಥಿತರಿದ್ದರು.