
ಮೈಸೂರು
ಜಾ.ದಳದ ನಗರ ಘಟಕ ಅಧ್ಯಕ್ಷರ ಆಯ್ಕೆ ಸಭೆ
ಮೈಸೂರಿನ ಜಾತ್ಯಾತೀತ ದಳದ ಕಚೇರಿಯಲ್ಲಿ ವಿವಿಧ ಬ್ಲಾಕ್ ಅಧ್ಯಕ್ಷರು ಮತ್ತು ನಗರ ಘಟಕದ ಅಧ್ಯಕ್ಷರ ಆಯ್ಕೆ ಸಭೆಯು ನಡೆಯಿತು.
ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಸಾ.ರಾ.ಮಹೇಶ್ ಮಾತನಾಡಿ ಜಾತ್ಯಾತೀತ ದಳ ನಗರ ಘಟಕದ ಅಧ್ಯಕ್ಷ ಮತ್ತು ನಗರದ ಆರು ಬ್ಲಾಕ್ ಗಳ ಅಧ್ಯಕ್ಷರ ಆಯ್ಕೆ ತೀರ್ಮಾನವನ್ನು ಪಕ್ಷದ ವರಿಷ್ಠರ ಗಮನಕ್ಕೆ ತಂದು ಒಂದೆರಡು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದರು.
ಮಹಾಪೌರರ ಸ್ಥಾನದ ಆಕಾಂಕ್ಷಿಗಳ ಪಟ್ಟಿಯನ್ನೂ ಪಕ್ಷದ ವರಿಷ್ಠರ ಗಮನಕ್ಕೆ ತಂದು ಚರ್ಚಿಸಿ ತೀರ್ಮಾನಿಸಲಾಗುವುದು. ಅಲ್ಲದೇ, 3ಕ್ಷೇತ್ರಗಳ 6ಬ್ಲಾಕ್ ಗಳು, ನಗರಾಧ್ಯಕ್ಷ ಸ್ಥಾನ, ರಾಷ್ಟ್ರ ಮತ್ತು ರಾಜ್ಯ ಕಾರ್ಯಕಾರಿಣಿಗೆ ಯಾರನ್ನು ಕಳುಹಿಸಬೇಕು ಎನ್ನುವ ವಿಷಯದ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇನ್ನೆರಡು ಮೂರು ದಿನಗಳಲ್ಲಿ ರಾಜ್ಯಾಧ್ಯಕ್ಷರು, ರಾಷ್ಟ್ರಾಧ್ಯಕ್ಷರ ಅನುಮತಿ ಪಡೆದು ನಗರ ಘಟಕದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಬ್ಲಾಕ್ ಅಧ್ಯಕ್ಷರುಗಳ ಆಯ್ಕೆ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುವುದು ಎಂದರು.
ನಗರ ಘಟಕದ ಅಧ್ಯಕ್ಷ ಮತ್ತು ಆರು ಬ್ಲಾಕ್ ಗಳ ಅಧ್ಯಕ್ಷ ಸ್ಥಾನಗಳಿಗೆ ಆಕಾಂಕ್ಷಿಗಳಿಂದ ಅರ್ಜಿಯನ್ನು ಪಡೆದರು. ಈ ಸಂದರ್ಭ ಶಾಸಕ ಚಿಕ್ಕಮಾದು, ವಿಧಾನಪರಿಷತ್ ಸದಸ್ಯರಾದ ಸಂದೇಶ್ ನಾಗರಾಜ್, ಕೆ.ಟಿ.ಶ್ರೀಕಂಠೇಗೌಡ ಮತ್ತಿತರರು ಉಪಸ್ಥಿತರಿದ್ದರು.