
ಕರ್ನಾಟಕ
ಶ್ರೀ ಅಪ್ಪಚ್ಚುಕವಿ ಬದುಕು-ಬವಣೆ ಸಾಕ್ಷ್ಯಚಿತ್ರ ಪ್ರದರ್ಶನ
ರಾಜ್ಯ(ಮಡಿಕೇರಿ) ಜೂ.3 : – ಅಲ್ಲಾರಂಡ ರಂಗಚಾವಡಿ ಹಾಗೂ ಸ್ಥಳೀಯ ದೃಶ್ಯ ವಾಹಿನಿಗಳ ಸಹಯೋಗದಲ್ಲಿ ಹರದಾಸ ಅಪ್ಪಚ್ಚು ಕವಿ ಅವರ 150 ನೇ ಜನ್ಮದಿನಾಚರಣೆ ಪ್ರಯುಕ್ತ “ಶ್ರೀ ಅಪ್ಪಚ್ಚುಕವಿ ಬದುಕು-ಬವಣೆ” ಸಾಕ್ಷ್ಯಚಿತ್ರದ ಪ್ರದರ್ಶನ ನಗರದ ಪತ್ರಿಕಾಭವನದಲ್ಲಿ ನಡೆಯಿತು.
ಸಾಕ್ಷ್ಯಚಿತ್ರ ಪ್ರದರ್ಶಿಸಿ ಮಾತನಾಡಿದ ಅಲ್ಲಾರಂಡ ರಂಗಚಾವಡಿಯ ಅಧ್ಯಕ್ಷರು ಹಾಗೂ ಸಾಕ್ಷ್ಯಚಿತ್ರದ ನಿರ್ದೇಶಕರಾದ ಅಲ್ಲಾರಂಡ ವಿಠಲ್ ನಂಜಪ್ಪ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುವ ನಮ್ಮ ಸಂಘಟನೆ ಕವಿ ಹೃದಯಕ್ಕೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಸಾಕ್ಷ್ಯಚಿತ್ರ ತಯಾರಿಸಿರುವುದಾಗಿ ತಿಳಿಸಿದರು.
ಮುಂದಿನ ದಿನಗಳಲ್ಲಿ ಕವಿಯ ಕುರಿತಾದ ಸಾಕ್ಷ್ಯಚಿತ್ರವನ್ನು ಜಿಲ್ಲೆಯ ಇತರ ಭಾಗಗಳಲ್ಲೂ ಪ್ರದರ್ಶಿಸಲಾಗುವುದೆಂದರು. ಸ್ಥಳೀಯ ದೃಶ್ಯ ವಾಹಿನಿಗಳು ಹಾಗೂ ಕೊಡವ ಮಕ್ಕಡ ಕೂಟ ಈ ರೀತಿಯ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯವೆಂದರು.
ನಗರಸಭೆಯ ಮಾಜಿ ಸದಸ್ಯ ಲಿಯಾಕತ್ ಆಲಿ ಮಾತನಾಡಿ, ಅಪ್ಪಚ್ಚಕವಿ ಅವರ ಬಗ್ಗೆ ಅಭಿಮಾನವಿಟ್ಟು ಮಾಹಿತಿಯನ್ನು ಕಲೆಹಾಕುವ ಮೂಲಕ ಸಾಕ್ಷ್ಯಚಿತ್ರವನ್ನು ನಿರ್ಮಿಸಿ ಕವಿ ಪರಿಚಯವನ್ನು ಮುಂದಿನ ಪೀಳಿಗೆಗೆ ಉಳಿಸುತ್ತಿರುವುದು ಹೆಮ್ಮೆಯ ವಿಚಾರವೆಂದರು.
ಹಿರಿಯ ಪತ್ರಕರ್ತರಾದ ಆನಂದ್ ಕೊಡಗು, ಆಕಾಶವಾಣಿ ಉದ್ಘೋಷಕ ರಫೀಕ್ ಅಹಮ್ಮದ್, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)