
ಮೈಸೂರು
ಯುವ ಸಮೂಹವನ್ನು ಧರ್ಮದತ್ತ ಆಕರ್ಷಿಸುವ ಅಗತ್ಯವಿದೆ: ಡಾ. ಡಿ. ವೀರೇಂದ್ರ ಹೆಗ್ಗಡೆ
ಯುವ ಸಮೂಹವನ್ನು ಧರ್ಮದತ್ತ ಆಕರ್ಷಿಸುವ ಅಗತ್ಯವಿದ್ದು, ಸಂಸ್ಕೃತಿಯನ್ನು ಮುಂದುವರಿಸುವ ಅಗತ್ಯವಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಮೈಸೂರಿನ ಪುರಭವನದಲ್ಲಿ ಎಸ್.ಜೆ.ಕೆ ಅಭಿನಂದನಾ ಸಮಿತಿ ವತಿಯಿಂದ ಏರ್ಪಡಿಸಲಾದ ಸಮಾರಂಭದಲ್ಲಿ ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷ ಜಿತೇಂದ್ರಕುಮಾರ್ ಅವರ ಕುರಿತು ಹೊರ ತಂದಿರುವ 600ಪುಟಗಳ ಅಭಿನಂದನಾ ಗ್ರಂಥ ರೂವಾರಿಯನ್ನು ವೀರೇಂದ್ರ ಹೆಗ್ಗಡೆ ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು ಯುವಕರನ್ನು ಧರ್ಮದ ಆವರಣದೊಳಗೆ ಕರೆ ತರಬೇಕು. ಸಂಸ್ಕಾರ ನೀಡಿ ಬದ್ಧತೆಯನ್ನು ಬೆಳೆಸಬೇಕು. ಆಗ ಮಾತ್ರ ಯುವ ಸಮೂಹ ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತದೆ ಎಂದರು. ಧರ್ಮದ ಋಣ ತೀರಿಸುತ್ತಿರುವ ಜಿತೇಂದ್ರ ಕುಮಾರ್ ಅವರ ಕಾರ್ಯದಲ್ಲಿ ತ್ಯಾಗ ಮತ್ತು ಬದ್ಧತೆಯಿದೆ. ಜೀವನವನ್ನು ಗಂಧದಂತೆ ಸವೆಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಎಸ್.ಜಿತೇಂದ್ರಕುಮಾರ್ ಅವರಿಗೆ ಎಂಭತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ಜೈನ ಮಠದ ಸಪ್ತ ಸ್ವಾಮೀಜಿಗಳ ಸಮ್ಮುಖದಲ್ಲಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಧವಳಕೀರ್ತಿ ಭಟ್ಟಾರಕ ಸ್ವಾಮೀಜಿ, ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.