
ಬೆಂಗಳೂರು (ಜೂನ್ 19): ತಿಂಗಳಾಂತ್ಯಕ್ಕೆ ಸೇವೆಯಿಂದ ನಿವೃತ್ತರಾಗುತ್ತಿರುವ ಕರ್ನಾಟಕ ರಾಜ್ಯ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಅವರ ಸೇವಾ ಅವಧಿಯನ್ನು ಆಡಳಿತ ಕಾರಣಗಳಿಗಾಗಿ ಇನ್ನೂ ಮೂರು ತಿಂಗಳು ಮುಂದುವರೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಜುಲೈನಿಂದ ಸೆಪ್ಟೆಂಬರ್’ವರೆಗೆ ರತ್ನಪ್ರಭಾ ಅವರನ್ನು ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಮುಂದುವರೆಸಲು ಅನುಮತಿ ನೀಡಬೇಕು ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿದ್ದಾರೆ.
ಆಡಳಿತದಲ್ಲಿ ಅಪಾರ ಅನುಭವ ಇರುವ ಕೆ.ರತ್ನಪ್ರಭಾ ಅವರು ಸಿದ್ದರಾಮಯ್ಯ ಅವರ ಆಡಳಿತ ಸಮಯದಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಆಯ್ಕೆ ಆಗಿದ್ದರು. ಕಳೆದ ವರ್ಷ ನವೆಂಬರ್ 30ರಂದು ರಾಜ್ಯದ ಮುಖ್ಯಕಾರ್ಯದರ್ಶಿಯಾಗಿ ಅವರು ಅಧಿಕಾರ ಸ್ವೀಕರಿಸಿದ್ದರು. 1981 ರ ಬ್ಯಾಚ್ನ ಐಎಎಸ್ ಅಧಿಕಾರಿ ಕೆ.ರತ್ನಪ್ರಭಾ ಅವರು ರಾಜ್ಯದ ಆಡಳಿತದ ಬಗ್ಗೆ ಆಳವಾದ ಜ್ಞಾನ ಹೊಂದಿದ್ದು, ಮುಂಬರುವ ರಾಜ್ಯ ಮತ್ತು ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅವರ ಅವಶ್ಯಕತೆ ಇದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಅವರು ಕರೆದಿದ್ದ ಐಎಎಸ್ಗಳ ಸಭೆಯಲ್ಲಿ ಮೋದಿ ಅವರು ರತ್ನಪ್ರಭಾ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದನ್ನು ಇಲ್ಲಿ ನೆನೆಯಬಹುದು. (ಎನ್.ಬಿ)