
ಮೈಸೂರು
ವಿವಾದಿತ ಸಿಲ್ಕ್ ಎಂಪೋರಿಯಂ ಮಳಿಗೆಗೆ ಬೀಗ : ಎಫ್ ಐ ಆರ್ ದಾಖಲು
ಮೈಸೂರು,ಅ.11:- ಚಾಮುಂಡಿ ಬೆಟ್ಟದ ರಸ್ತೆಯಲ್ಲಿರುವ ವಿವಾದಿತ ಸಿಲ್ಕ್ ಎಂಪೋರಿಯಂ ಮಳಿಗೆಗೆ ತಹಶೀಲ್ದಾರ್ ಬೀಗ ಜಡಿದಿದ್ದು ಮಳಿಗೆಯ ಮಾಲೀಕ ಮತ್ತವರ ಮಗನ ಮೇಲೆ ಎಫ್ ಐ ಆರ್ ದಾಖಲಾಗಿದೆ.
ಮೈಸೂರು ತಹಶೀಲ್ದಾರ್ ರಮೇಶ್ ಬಾಬು ಬೀಗ ಜಡಿದಿದ್ದು, ಮಳಿಗೆಯ ಮಾಲೀಕನ ಪುತ್ರ ಮಂಜೇಶ್ ಹಾಗೂ ಮಳಿಗೆ ನಡೆಸುತ್ತಿದ್ದ ಚಾಂದ್ ಪಾಷಾ ಮೇಲೆ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಎಂಎಲ್ ಸಿ ಸಂದೇಶ್ ನಾಗರಾಜ್ ಅವರಿಗೆ ಸೇರಿದ ಮಳಿಗೆ ಇದಾಗಿದ್ದು, ಮಳಿಗೆಯನ್ನು ಚಾಂದ್ ಪಾಷಾಗೆ ಬಾಡಿಗೆಗೆ ನೀಡಿದ್ದರು. ತಿಂಗಳಿಗೆ ಶೇಕಡ 16 ರಷ್ಟು ಲಾಭ ನೀಡುವ ಕರಾರಾಗಿತ್ತು. ಕರಾರು ಮೂರು ವರ್ಷಗಳ ಅವಧಿಗೆ ಮುಗಿದಿದ್ದು, ಕರಾರಿನಂತೆ ಚಾಂದ್ಪಾಷಾ ಲಾಭದ ಹಣ ನೀಡಿರಲಿಲ್ಲ ಎನ್ನಲಾಗಿದೆ. ಸುಮಾರು 10 ಲಕ್ಷ ಬಾಕಿ ಉಳಿಸಿಕೊಂಡಿದ್ದ. ಈ ವಿಚಾರದಲ್ಲಿ ಇಬ್ಬರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಈ ವಿಚಾರದಲ್ಲಿ ಅಧಿಕಾರಿಗಳು ಮಳಿಗೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಚಾಂದ್ಪಾಷಾ ಪತ್ನಿ ಆತ್ಮಹತ್ಯೆ ಬೆದರಿಕೆಯೊಡ್ಡಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಕಾವೇರಿ ಎಂಪೋರಿಯಂಗೆ ಬೀಗ ಜಡಿಯಲಾಗಿದೆ. (ಕೆ.ಎಸ್,ಎಸ್.ಎಚ್)