
ಪ್ರಮುಖ ಸುದ್ದಿ
ಸಾಲಬಾಧೆ ತಾಳಲಾರದೇ ವೃದ್ಧ ದಂಪತಿ ನೇಣಿಗೆ ಶರಣು
ರಾಜ್ಯ(ಮಡಿಕೇರಿ)ಡಿ.6:- ಸಾಲಬಾಧೆಯಿಂದ ವೃದ್ಧ ದಂಪತಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರಪೇಟೆ ತಾಲೂಕಿನ ತಾಕೇರಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಗ್ರಾಮದ ಕಾಫಿ ಬೆಳೆಗಾರರಾದ ಎಸ್.ಎಂ.ಅಪ್ಪಯ್ಯ(81), ಪತ್ನಿ ಬೊಳ್ಳಮ್ಮ(75)ಎಂದು ಗುರುತಿಸಲಾಗಿದೆ.ನಿನ್ನೆ ಮಧ್ಯಾಹ್ನದ ಹೊತ್ತಿಗೆ ಘಟನೆ ನಡೆದಿದೆ ಎನ್ನಲಾಗಿದೆ. ದಂಪತಿಗಳು ಏಣಿಯೊಂದಿಗೆ ಪಕ್ಕದ ಕಾಫಿ ತೋಟಕ್ಕೆ ತೆರಳಿ ಸಿಲ್ವರ್ ಮರ ಹಾಗೂ ಹುಳಿ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ.
ಬೆಳಿಗ್ಗೆ ಮಗ ಸೊಸೆ ಸೋಮವಾರಪೇಟೆಯಲ್ಲಿನ ಮದುವೆ ಸಮಾರಂಭಕ್ಕೆ ತೆರಳಿದ ನಂತರ ದಂಪತಿಗಳು ನೇಣು ಬಿಗಿದುಕೊಂಡಿದ್ದಾರೆ. ಸಂಜೆ ಮನೆಯಲ್ಲಿ ಪೋಷಕರು ಇರದಿದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸೋಮವಾರಪೇಟೆ ಠಾಣೆಯ ವೃತ್ತನಿರೀಕ್ಷಕ ನಂಜುಂಡೇಗೌಡ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಪ್ರಸಕ್ತ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದ ಕೃಷಿ ಫಸಲು ಹಾಳಾಗಿದ್ದು, ಕಾಫಿ, ಕಾಳುಮೆಣಸು ಫಸಲು ನಾಶವಾಗಿದೆ. ಐಗೂರು ಕೃಷಿಪತ್ತಿನ ಸಹಕಾರ ಸಂಘದಲ್ಲಿ 4 ಲಕ್ಷ ರೂ. ಸಾಲ ಇದ್ದು, ಫಸಲು ನಾಶದಿಂದ ಸಾಲ ಮರುಪಾವತಿಯ ಬಗ್ಗೆ ತಂದೆ ತಾಇ ಆತಂಕಗೊಂಡಿದ್ದರು ಎಂದು ಪುತ್ರ ಕಾಳಪ್ಪ ಸೋಮವಾರಪೇಟೆ ಠಾಣೆಗೆ ದೂರು ನೀಡಿದ್ದಾರೆ. (ಕೆಸಿಐ,ಎಸ್.ಎಚ್)