
ಕರ್ನಾಟಕಪ್ರಮುಖ ಸುದ್ದಿ
ತಂದೆ ಪಿಎಂ ಸ್ಥಾನವನ್ನೇ ಬಿಟ್ಟರು, ನಾನು ಸಿಎಂ ಸ್ಥಾನಕ್ಕೆ ಆಸೆಪಡ್ತೀನಾ? ಕಾಂಗ್ರೆಸ್ಗೆ ಎಚ್ಡಿಕೆ ಬಿಸಿ!
ಬೆಂಗಳೂರು (ಜ.31): ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ನನ್ನ ತಂದೆ ಪ್ರಧಾನಮಂತ್ರಿ ಸ್ಥಾನವನ್ನೇ ಬಿಟ್ಟ ಬಂದಿರುವಾಗ ಮಗನಾಗಿ ನಾನು ಸಿಎಂ ಸ್ಥಾನ ಬಿಡಲು ಹಿಂದೇಟು ಹಾಕ್ತೀನಾ ಎಂದು ಹೇಳುವ ಮೂಲಕ ಕಾಂಗ್ರೆಸ್ಗೆ ಬಿಸಿ ಮುಟ್ಟಿಸಿದ್ದಾರೆ.
ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಜನರಿಗೆ ಮೋಸ ಮಾಡಿ ನಾನು ಏನು ಸಾಧನೆ ಮಾಡಲಿ? ಮುಖ್ಯಮಂತ್ರಿ ಸ್ಥಾನ ಬಿಡಲು ನನಗೆ ಕಷ್ಟವೇನಿಲ್ಲ, ಅಧಿಕಾರದಲ್ಲಿ ಶಾಶ್ವತವಾಗಿ ಇರೋದಕ್ಕೆ ಆಗುತ್ತಾ? 16 ಸೀಟು ಪಡೆದು ನನ್ನ ತಂದೆಯವರು ಪ್ರಧಾನಿಯಾಗಿದ್ದರು. ಬಳಿಕ ಯಾವುದೇ ಆಸೆ-ಲಾಲಸೆ ಇಲ್ಲದೆ ಅವರು ಪ್ರಧಾನಮಂತ್ರಿ ಸ್ಥಾನವನ್ನೇ ಬಿಟ್ಟು ಬಂದಿದ್ದಾರೆ. ಅಂತಹವರ ಮಗನಾಗಿ ಮುಖ್ಯಮಂತ್ರಿ ಸ್ಥಾನ ಬಿಡಲು ನಾನು ಹಿಂದೇಟು ಹಾಕುತ್ತೇನಾ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ 12 ವರ್ಷಗಳಿಂದ ನಿಂತಿದ್ದ ಕೆಲಸವನ್ನು ನಾನು ಪ್ರಾರಂಭ ಮಾಡಿದ್ದೇನೆ. ಎಷ್ಟು ದಿನ ಇಂತಹ ಮಾತು ನಾನು ಸಹಿಸಿಕೊಳ್ಳಲಿ? ಸರ್ಕಾರದಲ್ಲಿ ಕೆಲಸವಾಗಿಲ್ಲ ಎಂದು ಪಾಪ ಯಾರೋ ಒಬ್ಬರು ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ 1 ಲಕ್ಷ ಕೋಟಿ ರೂ. ಯೋಜನೆ ಕೊಟ್ಟಿರುವುದು ಅವರಿಗೆ ಗೊತ್ತಿಲ್ಲವೆಂದು ಅನಿಸುತ್ತದೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಹೆಸರನ್ನು ಹೇಳದೇ ಅವರಿಗೆ ಸಿಎಂ ಛೇಡಿಸಿದರು. (ಎನ್.ಬಿ)