
ಕ್ರೀಡೆಪ್ರಮುಖ ಸುದ್ದಿ
ವಿಶ್ವಕಪ್ ನಿಂದ ಹೊರಬಿದ್ದ ಭಾರತ ತಂಡಕ್ಕೆ ಪ್ರಧಾನಿ ಮೋದಿ ಸಂದೇಶ
ದೇಶ(ನವದೆಹಲಿ)ಜು.11:- ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ವಿಶ್ವಕಪ್ 2019 ರ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 18 ರನ್ಗಳ ಸೋಲನುಭವಿಸಿದ ಭಾರತ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ. ಈ ಸಂದರ್ಭದಲ್ಲಿ ಭಾರತ ತಂಡದ ಆಟಗಾರರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂದೇಶ ರವಾನಿಸಿದ್ದಾರೆ.
ಟೀಂ ಇಂಡಿಯಾ ಗೆಲುವಿನ ಓಟದಲ್ಲಿತ್ತು. ಇಡೀ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಒಂದು ಪಂದ್ಯವನ್ನು ಸೋತಿದ್ದು ಬಿಟ್ಟರೆ ಮತ್ತೆಲ್ಲೂ ತನ್ನ ಗೆಲುವನ್ನು ಬಿಟ್ಟುಕೊಟ್ಟಿರಲಿಲ್ಲ. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿತ್ತು. ಆದರೆ ಎಲ್ಲರ ನಿರೀಕ್ಷೆ ಹುಸಿಯಾಗಿಸಿದ ಭಾರತ ತಂಡ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲನುಭವಿಸಿತ್ತು.
ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ ‘ಇದೊಂದು ನಿರಾಶಾದಾಯಕ ಫಲಿತಾಂಶ. ಆದರೂ ಟೀಂ ಇಂಡಿಯಾ ಕೊನೆಯವರೆಗೂ ಉತ್ತಮ ಹೋರಾಟ ಮಾಡಿದೆ. ಇಡೀ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಕ್ರಿಕೆಟ್ ತಂಡದ ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಎಲ್ಲವೂ ಅತ್ಯುತ್ತಮವಾಗಿತ್ತು. ನಮಗೆಲ್ಲ ತುಂಬ ಹೆಮ್ಮೆಯಿದೆ. ಸೋಲು-ಗೆಲುವು ಜೀವನದ ಒಂದು ಭಾಗ. ತಂಡಕ್ಕೆ ಒಳ್ಳೆಯದಾಗಲಿ’ ಎಂದು ಹಾರೈಸಿದ್ದಾರೆ. (ಎಸ್.ಎಚ್)