
ಕರ್ನಾಟಕ
ನೆರೆ ಸಂತ್ರಸ್ತರಿಗೆ ಕೊಲ್ಲೂರು ಮೂಕಾಂಬಿಕಾ ದೇಗುಲದಿಂದ ಒಂದು ಕೋಟಿ ರೂ. ದೇಣಿಗೆ
ಉಡುಪಿ,ಆ.16-ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ ತತ್ತರಿಸಿ ಹೋಗಿರುವ ಉತ್ತರ ಕರ್ನಾಟಕ ಮಂದಿಯ ನೆರವಿಗೆ ಹಲವು ಸಂಘ ಸಂಸ್ಥೆಗಳು, ದಾನಿಗಳು, ಸಿನಿತಾರೆಯರು ಧಾವಿಸಿದ್ದಾರೆ.
ಇದೀಗ ಉಡುಪಿ ಜಿಲ್ಲೆಯ ಪ್ರಸಿದ್ಧ ದೇವಸ್ಥಾನ ಕೊಲ್ಲೂರು ಮೂಕಾಂಬಿಕಾ ದೇಗುಲ ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದೆ. ಕೊಲ್ಲೂರು ಮೂಕಾಂಬಿಕಾ ದೇಗುಲದಿಂದ ಪರಿಹಾರ ದೇಣಿಗೆಯಾಗಿ ಒಂದು ಕೋಟಿ ರೂಪಾಯಿ ನೀಡಲು ದೇಗುಲದ ಆಡಳಿತ ಮಂಡಳಿ ನಿರ್ಧರಿಸಿದೆ.
ಕೊಲ್ಲೂರು ದೇಗುಲದ ವ್ಯವಸ್ಥಾಪನಾ ಸಮಿತಿಯು ಈ ತೀರ್ಮಾನ ಮಾಡಿದೆ. ಈ ದೇಣಿಗೆಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗುತ್ತದೆ. ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರಿನಲ್ಲಿ ಮೂಕಾಂಬಿಕಾ ದೇವಸ್ಥಾನ ಇದ್ದು, ರಾಜ್ಯ ಮತ್ತು ಪರ ರಾಜ್ಯಗಳಿಂದ ಸಾವಿರಾರು ಭಕ್ತರು ಇದ್ದಾರೆ. ಮಾತ್ರವಲ್ಲ, ಕೋಟ್ಯಂತರ ರೂಪಾಯಿ ಆದಾಯವಿರುವ ದೇವಸ್ಥಾನವೂ ಇದಾಗಿದೆ. (ಎಂ.ಎನ್)