
ಮೈಸೂರು
ಕುಸಿದು ಬಿದ್ದಿದ್ದ ಮನೆಗೆ ತೆರಳಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ವೃದ್ಧೆ ಸಾವು
ಮೈಸೂರು,ಆ.16:- ಕಳೆದ ಒಂದು ವಾರದಿಂದ ಸುರಿದ ಮಹಾಮಳೆ ಇದೀಗ ಮತ್ತೊಂದು ಬಲಿ ಪಡೆದಿದೆ. ಮಳೆಯಿಂದ ಕುಸಿದು ಬಿದ್ದಿದ್ದ ಮನೆಗೆ ತೆರಳಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ವೃದ್ಧೆ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲೂಕಿನಲ್ಲಿ ನಡೆದಿದೆ.
ಹೆಚ್.ಡಿ.ಕೋಟೆ ತಾಲೂಕು ಬಿದರಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ರಾಜಮ್ಮ(65) ಮೃತ ಪಟ್ಟ ವೃದ್ಧೆ. ಮಹಾಮಳೆಗೆ ಬಿದರಳ್ಳಿ ಗ್ರಾಮ ಮುಳುಗಡೆ ಆಗಿತ್ತು. ಹೀಗಾಗಿ ರಾಜಮ್ಮ ಕುಟುಂಬ ಸೇರಿದಂತೆ 20 ಕ್ಕೂ ಹೆಚ್ಚು ಕುಟುಂಬಗಳು ಗಂಜಿ ಕೇಂದ್ರದ ಅಶ್ರಯ ಪಡೆದಿದ್ದರು.
ನೀರಿನ ಪ್ರಮಾಣ ಇಳಿಕೆ ಆದ ಹಿನ್ನೆಲೆಯಲ್ಲಿ ಕುಸಿದು ಬಿದ್ದ ಮನೆಗೆ ವೃದ್ದೆ ರಾಜಮ್ಮ ತೆರಳಿದ್ದರು. ಈ ವೇಳೇ ವಿದ್ಯುತ್ ಸ್ಪರ್ಶಿಸಿ ರಾಜಮ್ಮ ಸಾವನ್ನಪ್ಪಿದ್ದಾರೆ. ಕೆ.ಇ.ಬಿ.ಸಿಬ್ಬಂದಿಗಳು ಮುಳುಗಡೆಯಾದ ಗ್ರಾಮದ ಮನೆಗಳ ವಿದ್ಯುತ್ ಸಂಪರ್ಕ ಕಟ್ ಮಾಡಿದ್ದರು. ಆದರೆ ರಾಜಮ್ಮ ಮನೆ ವಿದ್ಯುತ್ ಸಂಪರ್ಕ ಕಟ್ ಮಾಡದೆ ನಿರ್ಲಕ್ಷಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಕೆ.ಇ.ಬಿ.ಅಧಿಕಾರಿಗಳ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)