
ಪ್ರಮುಖ ಸುದ್ದಿ
ಮಡಿಕೇರಿ ಶಾಸಕರಿಗೆ ಸಚಿವ ಸ್ಥಾನ ನೀಡಲು ಶಿವಸೇನೆ ಒತ್ತಾಯ
ರಾಜ್ಯ(ಮಡಿಕೇರಿ) ಆ.22 : – ಕೊಡಗಿನ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕರ್ನಾಟಕ ಶಿವಸೇನಾ ಪಕ್ಷದ ಮಡಿಕೇರಿ ನಗರ ಘಟಕ ಒತ್ತಾಯಿಸಿದೆ.
ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ನಗರಾಧ್ಯಕ್ಷ ಎನ್.ಎ.ಸತೀಶ್ ಪೈ ಅವರು ಕೊಡಗಿನ ಜನತೆ ನಿರಂತರವಾಗಿ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಕೊಡಗು ಜಿಲ್ಲೆಯ ಇಬ್ಬರು ಶಾಸಕರು ಬಿಜೆಪಿಯವರೇ ಆಗಿದ್ದು, ಇವರಲ್ಲಿ ಅಪ್ಪಚ್ಚುರಂಜನ್ ಸಚಿವ ಸ್ಥಾನ ಲಭಿಸುವುದು ಖಚಿತವಾಗಿತ್ತು. ಅಲ್ಲದೆ ಸಂಪುಟ ರಚನೆಯ ಕೊನೆಯವರೆಗೂ ಭರವಸೆಯನ್ನು ಮೂಡಿಸಿತ್ತು. ಆದರೆ ಜಿಲ್ಲೆಯ ಜನರ ನಿರೀಕ್ಷೆಗಳು ಹುಸಿಯಾಗಿದ್ದು, ಮುಂದಿನ ಸಂಪುಟ ವಿಸ್ತರಣೆ ಸಂದರ್ಭವಾದರೂ ರಂಜನ್ ಅವರಿಗೆ ಸಚಿವ ಸ್ಥಾನ ನೀಡಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ವಹಿಸುವಂತೆ ಒತ್ತಾಯಿಸಿದ್ದಾರೆ.
ಸತತ ಐದು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಜನಮೆಚ್ಚುಗೆ ಗಳಿಸಿರುವ ಅಪ್ಪಚ್ಚುರಂಜನ್ ಅವರು ಜನಪರ ಕಾಳಜಿ ಹೊಂದಿದ್ದು, ಮುಖ್ಯಮಂತ್ರಿಗಳು ಹಾಗೂ ಪಕ್ಷದ ವರಿಷ್ಠರು ಇವರ ಸೇವೆಯನ್ನು ಪರಿಗಣಿಸಬೇಕೆಂದು ಸತೀಶ್ ಪೈ ಹೇಳಿದ್ದಾರೆ. (ಕೆಸಿಐ,ಎಸ್.ಎಚ್)