
ಕರ್ನಾಟಕಪ್ರಮುಖ ಸುದ್ದಿ
ಚಂದ್ರಯಾನ-2 ‘ವಿಕ್ರಮ್’ ಲ್ಯಾಂಡರ್ ಇಳಿಸಲು ಕ್ಷಣಗಣನೆ: ವಿಜ್ಞಾನಿಗಳಿಂದ ಅಂತಿಮ ಸಿದ್ಧತೆ
ಬೆಂಗಳೂರು,ಸೆ.6-ಭಾರತದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-2 ಬಾಹ್ಯಾಕಾಶ ನೌಕೆಯಿಂದ ‘ವಿಕ್ರಮ್’ ಲ್ಯಾಂಡರ್ ಅನ್ನು ಚಂದ್ರನ ಅಂಗಳಕ್ಕೆ ಇಳಿಸುವ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ.
ಇದಕ್ಕಾಗಿ ವಿಜ್ಞಾನಿಗಳಿಂದ ಅಂತಿಮ ಸಿದ್ಧತೆ ನಡೆದಿದ್ದು, ಹಗುರ ಚಂದ್ರನ ಸ್ಪರ್ಶ ಸುಸೂತ್ರವಾಗಿ ನಡೆಯಲಿ ಎಂದು ಎಲ್ಲರೂ ಮನಸ್ಸಿನಲ್ಲೇ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.
ಸೆ.7 ರಂದು ಮುಂಜಾನೆ 1.30ರಿಂದ 2.20ರ ಅವಧಿಯಲ್ಲಿ ಮಾತೃ ನೌಕೆಯಿಂದ ಪ್ರತ್ಯೇಕ ಗೊಳ್ಳುವ ಲ್ಯಾಂಡರ್ ಚಂದ್ರನ ನೆಲವನ್ನು ಸ್ಪರ್ಶ ಮಾಡಲಿದೆ. ಬಳಿಕ ರೋವರ್ ‘ಪ್ರಗ್ಯಾನ್’ ಚಲಿಸುವ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಭಾರತವಲ್ಲದೆ ವಿಶ್ವದ ಹಲವು ದೇಶಗಳ ಆಸಕ್ತರು ಕಾಯುತ್ತಿದ್ದಾರೆ. ಇದಕ್ಕಾಗಿ ಕಕ್ಷೆ, ಲ್ಯಾಂಡರ್ ನಿಯಂತ್ರಣ ಕೇಂದ್ರದಲ್ಲಿ ವಿಜ್ಞಾನಿಗಳಿಂದ ಅಂತಿಮ ಸಿದ್ಧತೆ ನಡೆದಿದೆ.
‘ಚಂದ್ರಯಾನ-1’ ಮತ್ತು ‘ಮಂಗಳಯಾನ-1’ರಲ್ಲಿ ಕಕ್ಷೆಗೆ ಸೇರಿಸುವ ಕಾರ್ಯಯಶಸ್ವಿಯಾಗಿ ನಡೆದಿತ್ತು. ‘ಲ್ಯಾಂಡರ್ ಇಳಿಸುವ ಕೌಶಲಕ್ಕೆ ಕೈಹಾಕಿರುವುದು ಇದೇ ಮೊದಲು. ಈ ಪ್ರಕ್ರಿಯೆ ನಾಜೂಕಿನದು. ಸಣ್ಣ ವ್ಯತ್ಯಾಸ ಆಗದಂತೆ ನೋಡಿಕೊಳ್ಳಬೇಕು. ಭೂನಿಯಂತ್ರಣ ಕೇಂದ್ರದಿಂದ ಎಲ್ಲವನ್ನು ನಿಭಾಯಿಸಲಾಗುತ್ತದೆ. ಇದೂ ನಮಗೆ ಹೊಸದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜುಲೈ 22ರಂದು ಚಂದ್ರಯಾನ ನೌಕೆ ಉಡಾವಣೆ ಮಾಡಲಾಗಿದ್ದು, ಕಕ್ಷೆಯಲ್ಲಿ ನೌಕೆಯನ್ನು ಮೇಲೇರಿಸುತ್ತಾ ಹೋಗಿದ್ದು, ಚಂದ್ರನ ಕಕ್ಷೆ ಪ್ರವೇಶ ಹಾಗೂ ಕಕ್ಷೆಯ ಅವರೋಹಣ ಯಶಸ್ವಿಯಾಗಿ ನಡೆದಿದೆ. ಇದೀಗ ಚಂದ್ರನ ಅಂಗಳಕ್ಕೆ ಇಳಿಯುವ ಕ್ಷಣಕ್ಕಾಗಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. (ಎಂ.ಎನ್)