
ಪ್ರಮುಖ ಸುದ್ದಿ
ವೃದ್ಧ ಕುರಿಗಾಹಿ ಹತ್ಯೆ ಮಾಡಿ ಕುರಿ ಹೊತ್ತೊಯ್ದ ಖದೀಮರು : ಚಾಮರಾಜನಗರ ತಾಲೂಕಿನ ಮಂಗಲ ಗ್ರಾಮದಲ್ಲಿ ಘಟನೆ
ರಾಜ್ಯ(ಚಾಮರಾಜನಗರ)ಫೆ.5:- ಕುರಿ ಮೇಯಿಸುತ್ತಿದ್ದ ವೃದ್ಧ ಕುರಿಗಾಹಿಯೋರ್ವರನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಚಾಮರಾಜನಗರ ತಾಲೂಕಿನ ಮಂಗಲ ಗ್ರಾಮದಲ್ಲಿ ನಡದಿದೆ.
ಕೊಲೆಯಾದ ವೃದ್ಧರನ್ನು ಮಂಗಲ ಗ್ರಾಮದ ಮಹದೇವೇಗೌಡ(60) ಎಂದು ಗುರುತಿಸಲಾಗಿದೆ. ಇವರು ಮಂಗಳವಾರ ಸಂಜೆ ಕುರಿ ಮೇಯಿಸುವಾಗ ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ. ಮಹದೇವೇಗೌಡ ಅವರ ಕತ್ತಿಗೆ ಪಂಚೆ ಬಿಗಿದು, ಸ್ವಲ್ಪ ದೂರದವರೆಗೆ ಎಳೆದು ತಂದು ನಂತರ ಕಲ್ಲಿನಿಂದ ತಲೆ ಜಜ್ಜಿ ಕೊಲೆ ಮಾಡಲಾಗಿದೆ. ಮಂಗಳವಾರ ಕುರಿ ಮೇಯಿಸಿಕೊಂಡು ಬರಲು ಹೋಗಿದ್ದ ಮಹದೇವೇಗೌಡ ಮನೆಗೆ ವಾಪಸ್ಸು ಬಾರದ ಕಾರಣ ಇಂದು ಬೆಳಿಗ್ಗೆ ಹುಡುಕಾಟ ನಡೆಸಿದಾಗ ಮಾದಾಪುರದ ಬಳಿ ಮೃತದೇಹ ಪತ್ತೆಯಾಗಿದೆ.
ಸಂತೆಮರಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೃದ್ಧ ಕುರಿಗಾಹಿಯನ್ನು ಹತ್ಯೆ ಮಾಡಿದ್ದಲ್ಲದೇ ಕುರಿಯನ್ನು ಕೂಡ ಖದೀಮರು ಹೊತ್ತೊಯ್ದಿದ್ದು,ಆರೋಪಿಗಳ ಪತ್ತೆಗಾಗಿ ಈಗಾಗಲೇ ಪೊಲೀಸರು ಬಲೆ ಬೀಸಿದ್ದಾರೆ. (ಕೆ.ಎಸ್,ಎಸ್.ಎಚ್)