
ಮೈಸೂರು
ಎಂಎಸ್ ಐ ಎಲ್ ಮದ್ಯ ಮಾರಾಟ ಮಳಿಗೆಯ ಗೋಡೆ ಕೊರೆದು 50,746 ರೂ.ಮೌಲ್ಯದ ಮದ್ಯ ಕದ್ದೊಯ್ದ ಕಳ್ಳರು : ದೂರು
ಮೈಸೂರು,ಏ.18:- ಎಂಎಸ್ ಐ ಎಲ್ ಮದ್ಯ ಮಾರಾಟ ಮಳಿಗೆಯ ಗೋಡೆ ಕೊರೆದು ಕಳ್ಳರು ಸುಮಾರು 50,746 ರೂ.ಮೌಲ್ಯದ ಮದ್ಯವನ್ನು ಕದ್ದೊಯ್ದ ಘಟನೆ ಎಂಎಸ್ಐಎಲ್ ಮದ್ಯ ಮಾರಾಟ ಮಳಿಗೆ ಶ್ರೀರಾಂಪುರದಲ್ಲಿ ನಡೆದಿದೆ.
ಈ ಕುರಿತು ವಿದ್ಯಾರಣ್ಯಪುರಂ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಂಎಸ್ಐಎಲ್ ಮದ್ಯ ಮಾರಾಟ ಮಳಿಗೆ ಶ್ರೀರಾಂಪುರದಲ್ಲಿ ನಾಲ್ಕು ತಿಂಗಳಿನಿಂದ ಉಸ್ತುವಾರಿ ಸಹಾಯಕನಾಗಿ ಕೆಲಸ ಮಾಡಿಕೊಂಡಿರುವ ಆರ್.ಸಂತೋಷ್ಕುಮಾರ್ ಎಂಬವರು ದೂರು ನೀಡಿದ್ದಾರೆ.
ಎಂಎಸ್ಐಎಲ್ ಮದ್ಯ ಮಾರಾಟ ಮಳಿಗೆ ಶ್ರೀರಾಂಪುರದಲ್ಲಿ ನಾಲ್ಕು ತಿಂಗಳಿನಿಂದ ಉಸ್ತುವಾರಿ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದು, ಪ್ರತಿದಿನ ಬೆಳಿಗ್ಗೆ 11 ಗಂಟೆಗೆ ಮಾರಾಟ ಮಳಿಗೆಯ ಬಾಗಿಲನ್ನು ತೆರೆದು ರಾತ್ರಿ 10 ಗಂಟೆಗೆ ಮಳಿಗೆ ಮುಚ್ಚುತ್ತಿದ್ದೆ. ಅದರಂತೆ 21-03-2020 ರಂದು ಮಳಿಗೆ ತೆಗೆದು ವಹಿವಾಟು ನಡೆಸಿ 22-03-2020 ರಂದು ಜನತಾ ಕರ್ಫ್ಯೂ ಇದ್ದು ಮೇಲಾಧಿಕಾರಿಗಳ ಆದೇಶದ ಮೇರೆಗೆ ಮುಚ್ಚಲಾಗಿದೆ. 23-02-2020 ರಿಂದ ರಾಜ್ಯಾದ್ಯಂತ ಲಾಕ್ ಡೌನ್ ಜಾರಿಯಾದ ಕಾರಣ ಅಬಕಾರಿ ಇಲಾಖೆಯವರು ಮಳಿಗೆಯನ್ನು ಸೀಲ್ ಮಾಡಿರುತ್ತಾರೆ. ಮಳಿಗೆಯನ್ನು ಪರಿಶೀಲಿಸಲು ಮಳಿಗೆ ಸಹಾಯಕರಾದ ಭರತ್ ಎಂಬರನ್ನು ನೇಮಿಸಿದ್ದು, ಭರತ್ 16-04-2020 ರಂದು ಬೆಳಿಗ್ಗೆ ಸುಮಾರು 8 ಗಂಟೆಯಲ್ಲಿ ಮಳಿಗೆಯನ್ನು ಪರಿಶೀಲಿಸಿದಾಗ ಮಳಿಗೆ ಹಿಂಭಾಗದಲ್ಲಿ ಗೋಡೆಯನ್ನು ಕೈ ಹಾಕುವಷ್ಟು ಗೋಡೆ ಕೊರೆದು ಕಳ್ಳತನ ಮಾಡಿದ್ದು, ನಂತರ ಮೇಲಾಧಿಕಾರಿಗಳು ಹಾಗೂ ಅಬಕಾರಿ ಅಧಿಕಾರಿಗಳ ಜೊತೆಯಲ್ಲಿ ಮಳಿಗೆಗೆ ಹಾಕಿದ್ದ ಸೀಲ್ ತೆರೆಸಿ ನೋಡಲಾಗಿ ಗೋಡೆಯ ಪಕ್ಕದಲ್ಲಿ ಇಟ್ಟಿದ್ದ ವಿಂಡ್ಸರ್ ವಿಸ್ಕಿ 90 ಎಂ.ಎಲ್.ನ 1439 ಟೆಟ್ರಾಪ್ಯಾಕ್ಗಳು, ಕೋಡೇಸ್ ರಮ್ 180 ಎಂ.ಎಲ್.ನ 96 ಟೆಟ್ರಾಪ್ಯಾಕ್ಗಳು ಕಳ್ಳತನವಾಗಿದೆ. ಇದರ ಒಟ್ಟು ಮೌಲ್ಯ 50,746 ರೂಪಾಯಿಗಳಾಗುತ್ತದೆ, ಕಳ್ಳತನವಾಗಿರುವ ಮದ್ಯವನ್ನು ಪತ್ತೆಮಾಡಿ ಮುಂದಿನ ಕಾನೂನು ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)