
ಮೈಸೂರು
ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು : ಬಡಗಲಪುರ ನಾಗೇಂದ್ರ ಒತ್ತಾಯ
ಮೈಸೂರು,ಮೇ.13:- ಪ್ರಧಾನಿ ಮೋದಿ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಕುರಿತು ಮೈಸೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಈ ಕೊರೋನಾ ಈ ವ್ಯವಸ್ಥೆಯ ಕಣ್ಣು ತೆರೆಸಿದಂತೆ ಕಾಣುತ್ತಿದೆ. 20 ಲಕ್ಷ ಕೋಟಿ ರೈತರಿಗೆ ಮತ್ತು ಕಾರ್ಮಿಕ ವಲಯಕ್ಕೆ ಹೆಚ್ಚು ಬಳಕೆ ಆಗಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಕೃಷಿಕರಿಗೆ ಶೂನ್ಯ ಬಡ್ಡಿದರಲ್ಲಿ ಹೊಸ ಸಾಲ ನೀಡಬೇಕು. ಕೊರೋನಾ ಕೃಷಿ ಮತ್ತು ಆಹಾರ ಉತ್ಪನ್ನಗಳ ಅವಶ್ಯಕತೆ ಎಷ್ಟು ಎಂಬುದನ್ನು ತಿಳಿಸಿದೆ. ಕೃಷಿ ಹಾಗೂ ಕೃಷಿ ಕಾರ್ಮಿಕರು ಹಾಗೂ ಗುಡಿ ಕೈಗಾರಿಕೆ ಕೆಂದ್ರ ಸರ್ಕಾರ ಉತ್ತೇಜ ನೀಡಬೇಕು ಎಂದರು.
ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿರುವುದು ಸರಿಯಲ್ಲ. ರೈತರಿಗೆ ಈ ಕಾಯ್ದೆ ಮಾರಕವಾಗಲಿದೆ. ದಳ್ಳಾಳಿಗಳ ಹಾವಳಿ ತಪ್ಪುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಇದು ಕಾರ್ಪೊರೇಟ್ ಸೆಕ್ಟರ್ ಗಳ ಹುನ್ನಾರ. ಈ ಕಾಯ್ದೆ ತಿದ್ದುಪಡಿ ರೈತಾಪಿ ವರ್ಗಕ್ಕೆ ಮಾರಕವಾಗಲಿದ್ದು, ರಾಜ್ಯ ರೈತ ಸಂಘ ಇದನ್ನು ತೀವ್ರವಾಗಿ ಖಂಡಿಸುತ್ತದೆ. ಇದರಿಂದ ರೈತರಿಗೆ ಅನಾನುಕೂಲಗಳೇ ಹೆಚ್ಚು. ರಾಜ್ಯ ಸರ್ಕಾರ ಶಾಸನ ಸಭೆಯಲ್ಲಿ ಇದರ ಬಗ್ಗೆ ಚರ್ಚೆ ಮಾಡಬೇಕು. ರೈತ ಮುಖಂಡರು ಹಾಗೂ ವಿರೋಧ ಪಕ್ಷಗಳೊಡನೆ ಸಿಎಂ ಚರ್ಚೆ ಮಾಡಬೇಕು. ಕೇಂದ್ರ ಸರ್ಕಾರದ ಒತ್ತಡದಿಂದ ಸಿಎಂ ಈ ನಿರ್ಧಾರ ಕೈಗೊಂಡಿದ್ದಾರೆ ಎಂದರು. (ಕೆ.ಎಸ್,ಎಸ್.ಎಚ್)