
ಕರ್ನಾಟಕಪ್ರಮುಖ ಸುದ್ದಿ
ಹಾಸನ: ಯುವತಿಯನ್ನು ಕೊಲೆಗೈದು ಆತ್ಮಹತ್ಯೆಗೆ ಶರಣಾದ ಯುವಕ
ಸಕಲೇಶಪುರ,ಜ.29-ಯುವತಿಯೊಬ್ಬಳ ಕತ್ತು ಕೊಯ್ದು ಹತ್ಯೆ ಮಾಡಿ ಯುವಕನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ತಾಲೂಕಿನ ಕೋಗರಹಳ್ಳಿ(ಸಿದ್ದಾಪುರ) ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸುಶ್ಮಿತ(20) ಕೊಲೆಯಾದ ಯುವತಿ. ಹೇಮಂತ (22) ಸುಶ್ಮಿತಳನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಯುವಕ.
ಗ್ರಾಮದ ಮುಖ್ಯರಸ್ತೆಯಲ್ಲಿ ಸುಶ್ಮಿತ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಸುಶ್ಮಿತ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಬಳಿಕ ಹೇಮಂತ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸುಶ್ಮಿತಳನ್ನು ಕೊಲೆಗೈದಿರುವ ವಿಷಯ ತಿಳಿಯದ ಯುವತಿಯ ಸಂಬಂಧಿ ಆತನನ್ನು ರಕ್ಷಿಸಿದ್ದ ಎನ್ನಲಾಗಿದೆ. ಹತ್ಯೆಯ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಆತನನ್ನು ಹುಡುಕಾಡಿದ್ದು, ಆದರೆ ಆತ ಮನೆ ಹಿಂಭಾಗದ ಮರವೊಂದಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಯುವತಿ ಪ್ರೀತಿಗೆ ಒಪ್ಪಿರಲಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಎಂ.ಎನ್)