
ಮೈಸೂರು
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ
ಮೈಸೂರು,ಮಾ.10-ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲದವರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಇಂದು ಪ್ರತಿಭಟನೆ ನಡೆಸಿದರು.
ಹೊರಗುತ್ತಿಗೆ ನೌಕರರ ಸೇವೆಯನ್ನು ಮುಂಜೂರಾಗದ ಹುದ್ದೆಯಲ್ಲಿದ್ದರು ಮುಂದುವರಿಯುವಂತೆ ಸರ್ಕಾರಿ ಆದೇಶದ 2019ರ ಮಾರ್ಚ್ 22 ರಂತೆ 3ನೇ ಕಂಡಿಕೆಗೆ ಅವಶ್ಯ ತಿದ್ದುಪಡಿಯನ್ನು ಜಾರಿಗೆ ತರಲೇಬೇಕು. ಕೆಲಸದಿಂದ ತೆಗೆದಿರುವ ಹೊರಗುತ್ತಿಗೆ ನೌಕರರನ್ನು ಮುಂದುವರಿಸಲು ಆದೇಶಿಸಬೇಕು. ಹೊರಗುತ್ತಿಗೆ ಹಾಗೂ ಒಳಗುತ್ತಿಗೆ ಪದ್ಧತಿಯನ್ನು ರದ್ದುಮಾಡಿ ಅವರು ಹಾಲಿ ಕೆಲಸ ನಿರ್ವಹಿಸುತ್ತಿರುವ ಹುದ್ದೆಗಳಲ್ಲಿಯೇ ಖಾಯಂ ಮಾಡುವ ಬಗ್ಗೆ ವಿಶೇಷ ಕಾನೂನು ಮಾಡಬೇಕು. ಕನಿಷ್ಠ ವೇತನ ಕಾಯ್ದೆ ಮೇರೆಗೆ ಹೊರಗುತ್ತಿಗೆ ಒಳಗುತ್ತಿಗೆ ನೌಕರರಿಗೆ ಕನಿಷ್ಠ ವೇತನದನ್ವಯ ಪಾವತಿಸಬೇಕು. ಇವರೆಲ್ಲರಿಗೆ ಇಪಿಎಫ್ ಹಾಗೂ ಇಎಸ್ಐ ಜಮಾ ಮಾಡಬೇಕು. ಈಗಾಗಲೇ ಕೆಲ ಇಲಾಖೆಗಳಲ್ಲಿ ಕನಿಷ್ಠ ವೇತನ ಪಾವತಿಸದೆ ವಿಳಂಬ ಮಾಡುತ್ತಿದ್ದು ಕಾಯಿದೆ ಅನ್ವಯ ನಿಗದಿತ ದಿನಾಂಕದಂದು ಸಂಬಳ ನೀಡಲು ಆದೇಶ ಹೊರಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ನಡೆಸಿದರು. (ಎಚ್.ಎನ್, ಎಂ.ಎನ್)