
ಕರ್ನಾಟಕಪ್ರಮುಖ ಸುದ್ದಿ
ಸಚಿವಾಲಯದ ಸಿಬ್ಬಂದಿಗೆ ಕಠಿಣ ನಿಯಮ ಜಾರಿಗೊಳಿಸಲು ಮುಂದಾದ ಸಭಾಪತಿ ಬಸವರಾಜ ಹೊರಟ್ಟಿ
ಬೆಂಗಳೂರು,ಏ.16-ಸಚಿವಾಲಯದ ಸಿಬ್ಬಂದಿಗೆ ಕಠಿಣ ನಿಯಮ ಜಾರಿಮಾಡಲು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮುಂದಾಗಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೊರಟ್ಟಿ ಅವರು, ಸಚಿವಾಲಯದ ಸಿಬ್ಬಂದಿಗೆ ಬಯೋಮೆಟ್ರಿಕ್ ಕಡ್ಡಾಯ ಮಾಡಿದ್ದು, ಸ್ಯಾನಿಟೈಸ್ ಮಾಡಿ ಬಯೋಮೆಟ್ರಿಕ್ ಉಪಯೋಗಿಸಬೇಕು. ಕೊರೊನಾ ನೆಪವೊಡ್ಡಿ ಬಯೋಮೆಟ್ರಿಕ್ ತೆಗೆಯುವಂತಿಲ್ಲ. ತೆಗೆದರೆ ಸಿಬ್ಬಂದಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸುವುದಿಲ್ಲ. ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬರುವುದಿಲ್ಲ. ಹೀಗಾಗಿ ಬಯೋಮೆಟ್ರಿಕ್ ಕಡ್ಡಾಯ ಮಾಡಿದ್ದೇವೆ. ಸರಿಯಾದ ಸಮಯಕ್ಕೆ ಬರದವರಿಗೆ ಕ್ರಮತೆಗೆದುಕೊಳ್ಳುವುದಾಗಿ ಎಚ್ಚರಿಸಿದರು.
ಡಿ ಗ್ರೂಪ್ ನೌಕರರಿಗೆ ಸಮವಸ್ತ್ರ ವಿಚಾರವಾಗಿ ಪ್ರತಿಕ್ರಿಯಿಸಿದ ಸಭಾಪತಿ ಬಸವರಾಜ ಹೊರಟ್ಟಿ, ನೌಕರರು ಹೇಳಿದಂತೆ ಕುಣಿಯಲು ಸಾಧ್ಯವಿಲ್ಲ. ನಾವು ಜಾರಿ ಮಾಡಿದ ನಿಯಮವನ್ನು ಪಾಲಿಸಬೇಕಷ್ಟೆ. ಸಮವಸ್ತ್ರ ಇದ್ದರೆ ಕರ್ತವ್ಯದಲ್ಲಿ ಶಿಸ್ತು ಹೆಚ್ಚಾಗಲಿದೆ. ಬಿಳಿ ಬಣ್ಣ ಬೇಡವೆಂದು ಮನವಿ ಮಾಡಿದ್ದ ನೌಕರರ ಬೇಡಿಕೆಯನ್ನು ಪರಿಗಣಿಸಲಾಗದು. ಬಣ್ಣ ಬದಲಾಯಿಸಲು ಸಾಧ್ಯವಿಲ್ಲ. ಈಗಾಗಲೇ ಯೂನಿಫಾರಂ ಬಗ್ಗೆ ಹೇಳಿದ್ದೇವೆ. ಸರ್ಕಾರಿ ಮಳಿಗೆಯಿಂದಲೇ ಸಮವಸ್ತ್ರ ಖರೀದಿಸಲಾಗುವುದು. ಮಹಿಳೆಯರಿಗೆ ಸೀರೆಗೆ ಬದಲು ಚೂಡಿದಾರ್ ಹಾಕಿಕೊಳ್ಳಲು ಅವಕಾಶ ನೀಡಲಾಗಿದೆ ಎಂದರು. (ಎಂ.ಎನ್)