
ಮೈಸೂರು
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಿ.ಎಸ್.ಜಗದೀಶ್ ನಿಧನ
ಮೈಸೂರು, ಡಿ.16:- ಮೈಸೂರಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಿ.ಎಸ್ ಜಗದೀಶ್ ಅವರು ಗುರುವಾರ ಬೆಳಿಗ್ಗೆ ನಿಧನರಾದರು.
ಅವರಿಗೆ 91ವರ್ಷ ವಯಸ್ಸಾಗಿತ್ತು. ಮೃತರು ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಮಗಳು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.
ವಿವೇಕಾನಂದ ವೃತ್ತದ ಸಮೀಪದಲ್ಲಿ ಇರುವ ಶ್ರೀಪಾದಶಿಲೆ ಉದ್ಯಾನವು ನಳನಳಿಸಲು ಕಾರಣಕರ್ತರು ಇವರೇ. ಉದ್ಯಾನದಲ್ಲಿ ಹೊಸ ಹೊಸ ಗಿಡಗಳನ್ನು ನೆಡುತ್ತಾ,ಅವುಗಳಿಗೆ ನೀರುಣಿಸುತ್ತಾ, ಪೋಷಿಸುತ್ತಾ ಬಂದಿದ್ದ ಜಗದೀಶ್ ಅವರನ್ನು ಉದ್ಯಾನದ ವಾಯುವಿಹಾರಿಗಳು ಮರೆಯುವಂತಿಲ್ಲ.
ತಮ್ಮ ಕೈನೆಟಿಕ್ ಹೋಂಡಾವನ್ನು ಊರುಗೋಲು ಸಿಕ್ಕಿಸಿಕೊಂಡು ಏರಿ ನೀರಿನ ಪೈಪ್ ಹಾಗೂ ಬಾಟಲಿಗಳಲ್ಲಿ ನೀರು ತಂಬಿಸಿಕೊಂಡು ಬಂದು ಉದ್ಯಾನದ ಗಿಡಗಳಿಗೆ ನೀರುಣಿಸುತ್ತಾ ಆ ಗಿಡಗಳು ಬೆಳೆಯುವುದನ್ನು ನೋಡಿ ಸಂತಸ ಪಡುತ್ತಿದ್ದರು ಜಗದೀಶ್. ಆದರೆ ಇಂದು ಎಲ್ಲರನ್ನೂ ಅಗಲಿದ್ದಾರೆ. (ಕೆ.ಎಸ್,ಎಸ್.ಎಚ್)