
ಕರ್ನಾಟಕಪ್ರಮುಖ ಸುದ್ದಿ
ಶೀಘ್ರದಲ್ಲೇ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ; ದೇವೇಗೌಡರನ್ನು ಕೇಳಿ ಮುಂದಿನ ತೀರ್ಮಾನ ; ಸಿಎಂ ಇಬ್ರಾಹಿಂ
ರಾಜ್ಯ(ಬೆಂಗಳೂರು),ಜ.27 :- ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕರಾಗಿ ಬಿ.ಕೆ.ಹರಿಪ್ರಸಾದ್ ಅವರನ್ನು ನೇಮಕ ಮಾಡಿರುವ ಬೆನ್ನಲ್ಲೇ ಕಾಂಗ್ರೆಸ್ ಎಂಎಲ್ ಸಿ ಸಿಎಂ ಇಬ್ರಾಹಿಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂಎಲ್ ಸಿ ಸಿಎಂ ಇಬ್ರಾಹಿಂ, ಸಿದ್ದರಾಮಯ್ಯಗಾಗಿ ನಾವು ದೇವೇಗೌಡರನ್ನು ಬಿಟ್ಟು, ಜೈಲಿನಲ್ಲಿದ್ದು ಕಟ್ಟಿದ್ದ ಪಕ್ಷ ಜೆಡಿಎಸ್ ನ್ನು ಬಿಟ್ಟೆವು. ಒಂದೇ ಬಾರಿಗೆ ಎಲ್ಲ ವಿಚಾರಗಳನ್ನು ಹೇಳುವುದಿಲ್ಲ. ಕಂತು ಕಂತಾಗಿ ಎಲ್ಲಾ ವಿಚಾರಗಳನ್ನು ಹೇಳುತ್ತೇನೆ. ಶೀಘ್ರದಲ್ಲೇ ನನ್ನ ನಿರ್ಧಾರವನ್ನು ತಿಳಿಸುತ್ತೇನೆ. ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ರು. ಇದು ತಿಳಿದು ಬಾದಾಮಿಯಲ್ಲಿ ನಾಮಪತ್ರ ಹಾಕಿಸಿದ್ದೆ. ಅಲ್ಲಿನ ಎಲ್ಲ ನಾಯಕರನ್ನು ನಾನು ಒಪ್ಪಿಸಿದ್ದೆ. ಬಾದಾಮಿಯಲ್ಲಿ ಅವರು ಗೆದ್ದು ಶಾಸಕರು ಕೂಡ ಆದರು, ನಾವು ಸಿದ್ದರಾಮಯ್ಯಗೆ ಹೊಸ ರಾಜಕೀಯ ಜೀವನ ಕೊಟ್ಟೆವು. ಅದಕ್ಕೀಗ ಸಿದ್ದರಾಮಯ್ಯ ಹೊಸ ಉಡುಗೊರೆ ನೀಡಿದ್ದಾರೆ ಅದನ್ನು ನಾನು ಖುಷಿಯಿಂದ ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.
ಪರಿಷತ್ ಸ್ಥಾನಕ್ಕೆ ಶೀಘ್ರದಲ್ಲೇ ರಾಜೀನಾಮೆ ನೀಡುತ್ತೇನೆ, ದೇವೇಗೌಡರನ್ನು ಕೇಳಿ ಮುಂದಿನ ತೀರ್ಮಾನ ಮಾಡುತ್ತೇನೆ. ನನಗೆ ಸ್ಥಾನ ತಪ್ಪಿಸಿದ ಬಗ್ಗೆ ಸಿದ್ದರಾಮಯ್ಯ ಉತ್ತರಿಸಬೇಕು. ಡಿಕೆ ಶಿವಕುಮಾರ್ ಗೂ ನಮಗೂ ಹೊಂದಾಣಿಕೆಯಾಗಲ್ಲ, ಸಿದ್ದರಾಮಯ್ಯಗೂ ನನಗೆ ಚೆನ್ನಾಗಿತ್ತು. ಅಲ್ಲದೆ ನನಗೆ ದೆಹಲಿಯಿಂದ ಹಲವು ಕರೆಗಳು ಬಂದಿವೆ. ಎಲ್ಲ ಮಾಹಿತಿ ನನ್ನ ಬಳಿ ಇಟ್ಟುಕೊಂಡಿದ್ದೇನೆ ಎಂದು ಹೇಳಿದ್ದಾರೆ.(ಎಸ್.ಎಂ)