
ಪ್ರಮುಖ ಸುದ್ದಿ
ಟ್ರಸ್ಟ್ ಹೆಸರಿನಲ್ಲಿ ಲಕ್ಷಾಂತರ ರೂ ವಂಚನೆ: ಓರ್ವ ಬಂಧನ
ಪ್ರಮುಖ ಸುದ್ದಿ, ಬೆಂಗಳೂರು, ಜು.೧೯: ಟ್ರಸ್ಟ್ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ವಸೂಲಿ ಹಾಗೂ ನಂಬಿಕೆ ದ್ರೋಹವೆಸಗಿ ಆಭರಣಗಳನ್ನು ಪಡೆದು ವಂಚಿಸುತ್ತಿದ್ದ ವ್ಯಕ್ತಿಯನ್ನು ಸಿಟಿ ಮಾರ್ಕೆಟ್ ಪೊಲೀಸರು ಬಂಧಿಸಿ ೯.೪೮ ಲಕ್ಷ ರೂ. ಬೆಲೆಯ ೨೧ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ.
ಯಲಹಂಕದ ಟೌನ್ಬಜಾರ್ ರಸ್ತೆ, ಜಯಣ್ಣ ಬಿಲ್ಡಿಂಗ್ನಲ್ಲಿ ವಾಸವಾಗಿದ್ದ ಜಗದೀಶ್ ಷಾ (೫೨) ಬಂಧಿತ ಆರೋಪಿ. ಸಂವೇದನಾ ಟ್ರಸ್ಟ್ ಹೆಸರಿನಲ್ಲಿ ಈ ವ್ಯಕ್ತಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದುದಲ್ಲದೆ ನಂಬಿಕೆದ್ರೋಹವೆಸಗಿ ಚಿನ್ನಾಭರಣ ಮಾಲೀಕರಿಂದ ಸರಗಳನ್ನು ಪಡೆದು ತನ್ನ ಖಾತೆಯಲ್ಲಿ ಹಣವಿಲ್ಲದಿದ್ದರೂ ಚೆಕ್ ಕೊಟ್ಟು ವಂಚಿಸುತ್ತಿದ್ದ. ಪ್ರವೀಣಕುಮಾರ್ ಎಂಬುವರು ಸಿಟಿ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ೯೬ ಗ್ರಾಂ ತೂಕದ ೯ ಚಿನ್ನದ ಸರಗಳು ಮತ್ತು ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ೨೨೦ ಗ್ರಾಂ ತೂಕದ ೧೨ ಚಿನ್ನದ ಸರಗಳು ಸೇರಿ ಒಟ್ಟು ೩೧೬ ಗ್ರಾಂ ತೂಕದ ೨೧ ಸರಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಮೌಲ್ಯ ೯.೪೮ ಲಕ್ಷ ರೂ. ಎಂದು ಅಂದಾಜಿಸಲಾಗಿದೆ. (ವರದಿ ಬಿ.ಎಂ)