ಸುದ್ದಿ ಸಂಕ್ಷಿಪ್ತ
ರಸ್ತೆ ಬದಿಯಲ್ಲಿ ಮದ್ಯದಂಗಡಿ ತೆರೆಯದಂತೆ ಮನವಿ
ಸೋಮವಾರಪೇಟೆ, ಅ.10: ಗುಡ್ಡೆಹೊಸೂರು ಸುಣ್ಣದಕೆರೆ ದಾರಿಯ ಪಕ್ಕದಲ್ಲಿ ನೂತನವಾಗಿ ಮದ್ಯದಂಗಡಿ ತೆರೆಯಲು ಯತ್ನಿಸುತ್ತಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದು ಕರ್ನಾಟಕ ಕಾವಲು ಪಡೆಯ ಪದಾಧಿಕಾರಿಗಳು ಅಬಕಾರಿ ಇಲಾಖೆಯ ಸಹಾಯಕ ಅಧೀಕ್ಷಕರಿಗೆ ಮನವಿ ಮಾಡಿ ಆಗ್ರಹಿಸಿದ್ದಾರೆ.
ಮದ್ಯದಂಗಡಿ ತೆರೆಯಲು ಉದ್ದೇಶಿಸಿರುವ ಜಾಗದ ಪಕ್ಕದಲ್ಲಿಯೇ ಕೂಲಿ ಕಾರ್ಮಿಕರು, ಗಿರಿಜನ ಹಾಡಿ ಇದ್ದು, ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳೂ ಸಹ ಇದೇ ಮಾರ್ಗವನ್ನು ಅವಲಂಭಿಸಿದ್ದಾರೆ. ರಸ್ತೆಯೂ ಚಿಕ್ಕದಾಗಿದ್ದು ಈ ಸ್ಥಳದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಕಾವಲುಪಡೆಯ ಜಿಲ್ಲಾಧ್ಯಕ್ಷ ಎಂ. ಕೃಷ್ಣ, ಕಾವಲು ಪಡೆಯ ತಾಲೂಕು ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಹೆಚ್.ಹೆಚ್.ಕುಮಾರ್, ಮಹಿಳಾ ಘಟಕದ ಪ್ರೇಮಗೀತಾ ಅವರುಗಳು ಒತ್ತಾಯಿಸಿದ್ದಾರೆ. (ವರದಿ: ಕೆಸಿಐ, ಎಲ್.ಜಿ)